ಬುಧವಾರ, ಜುಲೈ 20, 2011

ಮಕ್ಕಳಿರಲವ್ವ ಮನೆತುಂಬ !

ಕಳೆದ ವಾರವಷ್ಟೇ ವಿಶ್ವ ಜನಸಂಖ್ಯಾ ಆಚರಿಸಿದ ಇಡೀ ವಿಶ್ವ ಅನೇಕ ಅಂಕಿ ಅಂಶ ಹಾಗು ಮಾರಕಗಳ ಬಗ್ಗೆ ಪೂರ್ಣ ಒಂದು ವಾರ ತಲೆ ಕೆಡಿಸಿಕೊಂಡು ಈಗ ತಣ್ಣಗಾಗಿದೆ. ಭಾರತದಲ್ಲೂ ಏನು ಕಮ್ಮಿ ಇಲ್ಲ, ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ, ದೂರದರ್ಶನ ಹಾಗು ಬಾನುಲಿಗಳಲ್ಲಿ ವಿವಿಧ "ಪಂಡಿತ"ರಿಂದ ಭಾರತದ ಜನಸಂಖ್ಯಾ ಮಾರಕಗಳ ಬಗ್ಗೆ ಉದ್ದುದ್ದ ಮಾತುಗಳೋ ಮಾತುಗಳು. ವಿಶ್ವದ ಹಾಗು ಇಡೀ ಭಾರತದ ಜನಸಂಖ್ಯಾ ಬೆಳವಣಿಗೆಯ ಬಾಧಕ ಹಾಗು ಸಾಧಕಗಳ ಬಗ್ಗೆ ಪೂರ್ಣವಾಗಿ ವಿವರಿಸುವಷ್ಟು ಸಾಧನಗಳು ನನ್ನಲ್ಲಿ ಇಲ್ಲ, ಆದರೆ ಆ ಒಂದು ವಾರದಲ್ಲಿ ಬಾರದ ಕೆಲವು ವಿಚಾರಗಳ ಅವಲೋಕನ ಈ ಲೇಖನದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ. 

೨೦೧೧ ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಸುಮಾರು ೧೨೦ ಕೋಟಿ, fertility rate ೨.೬ (೨.೬ ಮಕ್ಕಳು/೧ ಮಹಿಳೆಗೆ), death  ರೇಟ್ 6.4 deaths/1,000 population  ಹಾಗು ನಮ್ಮಲ್ಲಿ ಶೇಕಡಾ ೬೫ರಷ್ಟು  ಜನರು ೩೫ ವರ್ಷ ವಯಸ್ಸಿನ ಒಳಗಿನವರು ಅದರಲ್ಲಿ ಸುಮಾರು ೩೫ ಕೋಟಿ ೦-೧೪ ವಯಸ್ಸಿನ ಮಕ್ಕಳು (ಮೂಲ: http://en.wikipedia.org/wiki/Demographics_of_india) . ಈ ಅಂಕಿ ಅಂಶಗಳನ್ನು ನೋಡಿದರೆ ನನಗೆ ಈಗಿನ ಜನಸಂಖ್ಯಾ ಬೆಳವಣಿಗೆ ಅಂಥಹ ಮಹಾವೇಗದಲ್ಲಿ ಇಲ್ಲ ಎಂದೆನಿಸುತ್ತದೆ.
 
ಹಾಗಾದರೆ ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇಲ್ಲವಾ? ಎಂದು ನನ್ನ ಕೇಳಿದರೆ 'ನಿಯಂತ್ರಣ ಮಾಡಲೇ ಬೇಕು' ಎಂಬುದೇ ನನ್ನ ಉತ್ತರ, ಆದರೆ ದೇಶ ಅಥವಾ ವಿಶ್ವದ ಯಾವ ಭಾಗದಲ್ಲಿ ನಿಯಂತ್ರಣವಾಗಬೇಕು ಎಂಬುದು ನಾವು ಅರಿತಿರಬೇಕು. ನಮ್ಮ ಭಾರತದ ವಿಷಯಕ್ಕೆ ಬರುವುದಾದರೆ ಉತ್ತರದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳ ಜನಸಂಖ್ಯೆಯ ಜೊತೆಗೆ ಅಲ್ಲಿನ fertility rate ಕೂಡ ಹೆಚ್ಚು ( ಈ ಕೊಂಡಿಯನ್ನು ಗಮನಿಸಿ http://en.wikipedia.org/wiki/Indian_states_ranking_by_fertility_rate ) ಉತ್ತರದ ರಾಜ್ಯಗಳಲ್ಲಿ ಖಂಡಿತವಾಗಿಯೂ ಜನಸಂಖ್ಯೆಯ ನಿಯಂತ್ರಣ ಆಗಬೇಕಿದೆ, ಇಂದಿಗೂ ಅಲ್ಲಿನ ರಾಜ್ಯ ಸರ್ಕಾರಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಅನಿಸುತ್ತಿಲ್ಲ. 

ನಮ್ಮ ದಕ್ಷಿಣದ ರಾಜ್ಯಗಳ fertility rate ಗಣನೀಯವಾಗಿ ಕಡಿಮೆ ಆಗುತ್ತಿದೆ (ಸುಮಾರು ೨.೧ ) ಅದರಲ್ಲೂ ನಮ್ಮ ಕರ್ನಾಟಕದ ಜನಸಂಖ್ಯೆ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಇಡೀ ದೇಶಕ್ಕೆ 'ಜನಸಂಖ್ಯಾ ಕಾಯಿದೆ' ಮಾಡಿರುವುದು ಅಸಮಂಜಸವೆ ಸರಿ. 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ', ದೇಶದ ಯಾವ ಭಾಗದಲ್ಲಿ ಯಾವ ರೀತಿಯ ನಿಯಂತ್ರಣ ತರಬೇಕು ಎಂದು ತಿಳಿಯದ ಕೇಂದ್ರ ಸರ್ಕಾರ ಸುಖಾ ಸುಮ್ಮನೆ ನಮ್ಮ ಮೇಲೆ ಹರಿ ಹಾಯುತ್ತದೆ. ಇದನ್ನೆಲ್ಲಾ ನೋಡಿದರೆ ಕನ್ನಡಿಗರು ವಿನಾಶದ ಅಂಚಿನಲ್ಲಿ ಇರುವ ಜನಾಂಗ, ಮುಂದಿನ ಹಲವು ವರ್ಷಗಳಲ್ಲಿ "ಒಂದಾನೊಂದು ಕಾಲದಲ್ಲಿ 'ಕನ್ನಡಿಗರು ಎಂಬ ಜನಾಂಗ ಕನ್ನಡ ಎಂಬ ಭಾಷೆಯನ್ನು ಮಾತನಾಡುತ್ತಿದರು' ಎಂದು ಯಾವುದೊ ವೀಕಿಪೀಡಿಯ ಅಥವಾ ಪುಸ್ತಕದಲ್ಲಿ ನಮ್ಮ ವಲಸಿಗರು ಅಥವಾ  ಪರ ರಾಜ್ಯದ ಜನರು ಓದುವ ಸಂದರ್ಭ ಬಂದರೆ ಆಶ್ಚರ್ಯವೇನಲ್ಲ!

ಒಂದು ರಾಜ್ಯದ ಅಥವಾ ರಾಷ್ಟ್ರದ fertility rate ಅನ್ನೋದು ೨.೦ ಕ್ಕಿಂತ ಕಡಿಮೆ ಹೋದರೆ ಅದು ಆ ಜನಾಂಗದ ವಿನಾಶದ ಮುನ್ನುಡಿ,  ಅದಾಗಲೇ ದಕ್ಷಿಣದ ರಾಜ್ಯಗಳು ಈ ವಿನಾಶದ ಅಂಚಿಗೆ ಅಡಿಯನ್ನು ಇಡುತ್ತಿವೆ. ಹಾಗಾಗಿ ತಿಳುವಳಿಕೆಯಿಲ್ಲದೆ ಬೇರೆ ರಾಜ್ಯದವರು ಮಾಡುತ್ತಿರುವ ಅಚಾತುರ್ಯಕ್ಕೆ ಕನ್ನಡಿಗರು ತಮ್ಮ ವಂಶವನ್ನು ಬಲಿ ಕೊಡುತ್ತಿರುವುದು ಎಷ್ಟು ಸರಿ? ಕನ್ನಡಿಗರಿಗೆ ಇರುವ ಅಭಿಮಾನದ ಕೊರತೆಯಿಂದ ಕನ್ನಡದ ಮೇಲೆ ನಡೆಯುತ್ತಿರುವ ಪರಭಾಷಾ ಧಾಳಿಯನ್ನು ಇಂದು ತಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇಂದು ಒದಗಿದೆ, ಇನ್ನು ಕನ್ನಡಿಗರ ಕೊರತೆಯಿಂದ ಕನ್ನಡಿಗರ ಮೇಲೆ ನಡೆಯುವ ಧಾಳಿಯನ್ನು  ಮುಂದೆ ತಡೆಯಲು ಭಗೀರಥ ಪ್ರಯತ್ನ ಮಾಡಿದರು ಸಾಧ್ಯವಿಲ್ಲ.

ಹಾಗಾದರೆ ನಾವೇನು ಮಾಡಬೇಕು ಎನ್ನುತ್ತೀರಾ? ಏನು ಇಲ್ಲ ಸ್ವಾಮೀ, ಮಾನಸಿಕವಾಗಿ, ಆರ್ಥಿಕವಾಗಿ ಹಾಗು ದ್ಯಹಿಕವಾಗಿ ನಿಮಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಸಾಕುವ ಧ್ಯರ್ಯವಿದ್ದರೆ, ದಯವಿಟ್ಟು ನಿಮ್ಮ ವಂಶೋದ್ದಾರಕರ ಸಂಖ್ಯೆಯನ್ನು ೨ ಅಥವಾ ೩ಕ್ಕೆ ಹೆಚ್ಚಿಸಿಕೊಳ್ಳಿ ಅವರಿಗೂ ನೀವು ಈ ಮಾತನ್ನು ಹೇಳಿ. 'ಕನ್ನಡಿಗರು ನಶಿಸಿದ ಕಥೆ ಬೇರೆ ಯಾವುದೊ ಭಾಷೆಯಲ್ಲಿ ಸಿನಿಮಾ ಆಗಿ ಬರುವುದನ್ನು ತಪ್ಪಿಸುವ ಕೆಲವು ಮಾರ್ಗಗಳಲ್ಲಿ ಇದು ಒಂದು'.  ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು "ಮಕ್ಕಲಿರಲ್ಲವ್ವ ಮನೆತುಂಬ" ಎಂದು. ಅಂದು ಅನಕ್ಷರಸ್ಥರಾಗಿ ಅವರಿಗಿದ್ದ ದೂರದೃಷ್ಟಿ ಇಂದು ನಮಗಿಲ್ಲವಾಯಿತಲ್ಲ!.   



ಜನಸಂಖ್ಯೆ ಬೆಳವಣಿಗೆ ಮಾರಕವಲ್ಲ ಎಂಬ ವಿಚಾರದ ಮೇಲೆ ಮತ್ತಷ್ಟು ಅರಿಯಲು ಇಲ್ಲಿ ನೋಡಿ: http://www.overpopulationisamyth.com/

ಮಂಗಳವಾರ, ಜುಲೈ 5, 2011

ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ

ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ  ಯಾರದರನ್ನು ಒಬ್ಬರನ್ನು 'ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?' ಎಂದು ಕೇಳಿ, 'ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ....' ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.

ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ  ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ.

ಸಾಮಾನ್ಯವಾಗಿ ಇಂಥಹ ಕಾರ್ಯಕ್ರಮಗಳು ನಮಗೆ ಬಾಲಿವುಡ್, ಕಾಲಿವುಡ್ ಹಾಗು ಟಾಲಿವುಡ್ ಗಳಲ್ಲಿ ಹೆಚ್ಹಾಗಿ ಕೇಳಿರಿತ್ತೇವೆ ಅಥವಾ ನೋಡಿರುತ್ತೇವೆ, ಅಲ್ಲಿನ ಕಾರ್ಯಕ್ರಮದ ಮನರಂಜನೆ ಕೇವಲ ಅವರ ಭಾಷೆಯ ಚಿತ್ರಗಳ ಹಾಡುಗಳಿಗೆ ಅಥವಾ ತುಣುಕುಗಳಿಗೆ ಮೀಸಲಾಗಿರುತ್ತದೆ, ಆ ಮೂಲಕ ಅವರು ಪ್ರೇಕ್ಷಕರನ್ನು ಪ್ರೇಕ್ಷಕರಿಗೆ ಗೊತ್ತಿಲ್ಲದ ಹಾಗೆ ಆ ಭಾಷೆಯ ಪರಿಧಿಯೊಳಗೆ ಕಟ್ಟಿ ಹಾಕಿರುತ್ತಾರೆ, ಅದರ ಫಲಿತಾಂಶ ಏನೆಂದು ನಾನೇನು ಬೇರೆಯಾಗಿ ಹೇಳಬೇಕಿಲ್ಲ ಅದು ಎಲ್ಲರಿಗು ಗೊತ್ತಿರುವ ವಿಷಯ.

ಆದರೆ ನಮ್ಮಲ್ಲಿ ನಡೆದದ್ದೇನು? "ಸಾಲು ಸಾಲು ಪರಭಾಷೆಯ ಹಾಡುಗಳಿಗೆ ಕುಣಿತ", (ವಿಪರ್ಯಾಸವೆಂದರೆ ಕನ್ನಡ ಚಿತ್ರ ನಟನೆಗಾಗಿ ಎರೆಡೆರೆಡು ಫಿಲಂ ಫೇರ್ ಪ್ರಶಸ್ತಿ ಪಡೆದ ನಟಿಯರಿಂದ, ಬೇರೆ ಭಾಷೆ ಚಿತ್ರದ ಹಾಡುಗಳಿಗೆ ನರ್ತನ, ಅವರ ಮುಂದಿನ ಚಿತ್ರಗಳಿಗೆ ಕನ್ನಡ ಚಿತ್ರ ರಂಗ ಮತ್ತು ಕನ್ನಡಿಗರು ಬೇಡವೇನೋ?) ಈ ಮೂಲಕ ಅವರು ಅನ್ಯ ಭಾಷೆಯ ಚಿತ್ರಗಳಿಗೆ ಯಾವುದೇ ಖರ್ಚಿಲ್ಲದೆ ನಮ್ಮ ನಾಡಿನಲ್ಲಿ ಮಾರುಕಟ್ಟೆ ಒದಗಿಸಿ ಕೊಡುತ್ತಿದ್ದಾರೆ. 'ನಮ್ಮ ಸಿನಿಮಾ ಹಾಡುಗಳು ಯಾವದಕ್ಕೂ ಕಮ್ಮಿ ಇಲ್ಲ,  ನೋಡಿ, ಕೇಳಿ ಎಂಥೆಂಥಹ ಹಾಡುಗಳಿವೆ ನಮ್ಮಲ್ಲಿ, ಇನ್ನು ಮುಂದೆ ಇವೆಲ್ಲಕ್ಕೂ ಮೀರಿದ ಹಾಡು, ಚಿತ್ರಗಳು ಬರುತ್ತವೆ. ಕನ್ನಡ ಚಿತ್ರರಂಗ ಮನರಂಜನೆಯ ಗಣಿ' ಎಂಬ ಸೂಕ್ಷ್ಮ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಿಗರಿಗೆ ನೀಡಬಹುದಿತ್ತು. ಆದರೆ ಅವರು ಮಾಡಿದ್ದು, 'ಕನ್ನಡ ಚಿತ್ರಗಳಿಗೆ ಅನ್ಯ ಭಾಷೆಯ ಹೆಸರುಗಳು, ಕನ್ನಡ ಕಾರ್ಯಕ್ರಮಗಳ ನಡುವೆ  ಅನ್ಯ ಭಾಷೆಯ ಕುಣಿತಗಳು.' ಇನ್ನು ಜನರನ್ನು ಹೇಗಪ್ಪ ಕಟ್ಟಿ ಹಾಕಲು ಸಾಧ್ಯ? ಪರಭಾಷೆಯ ಹಾಡುಗಳಿಗೆ ನೃತ್ಯ ಮಾಡುತ್ತಾ, ಅವರಿಗೆ ಪುಕ್ಕಟೆ ಮಾರುಕಟ್ಟೆಯನ್ನು ನಮ್ಮ ನಾಡಿನಲ್ಲಿ ನೀಡುತ್ತ, ಕನ್ನಡ ಚಿತ್ರರಂಗಕ್ಕೆ  ಕನ್ನಡಿಗರೇ ಅನ್ಯರ ಧಾಳಿಯನ್ನು ಆಹ್ವಾನಿಸಿರುವುದು ಬೇಸರದ ವಿಷಯ.
ಇಷ್ಟು ಸಾಮನ್ಯ ಜ್ಞಾನ ಇಲ್ಲದ ಇವರು ಕನ್ನಡ ಚಿತ್ರ ರಂಗದ ದುಸ್ತಿತಿಗೆ ಕನ್ನಡಿಗರನ್ನು ಆಕ್ಷೇಪಣೆ ಮಾಡುವ ಯಾವ ಅಧಿಕಾರವು ಹೊಂದಿಲ್ಲ. ಸುವರ್ಣ ಫಿಲಂ ಅವಾರ್ಡ್ಸನಲ್ಲಿ ನಡೆದ ಪ್ರಮಾದಗಳು ಮರುಕಳಿಸಿದರೆ ಪರಭಾಷೆ ಚಿತ್ರಗಳಿಗೆ ನೀವೇ ರತ್ನಗಂಬಳಿ ಹಾಸಿ ಕೊಟ್ಟಹಾಗೆ, ನಿಮ್ಮ ಹೊಂಡವನ್ನು ನೀವೇ ತೆಗೆದು ಕೊಂದ ಹಾಗೆ, ನೀವು ಕುಳಿತ ಮರದ ಕೊಂಬೆಯನ್ನು ನೀವೇ ಕಡಿದ ಹಾಗೆ! ಕನ್ನಡಿಗರನ್ನು ಸೆಳೆಯಲು ಕನ್ನಡೇತರ ಮನರಂಜನೆಯ ಅಗತ್ಯವಿಲ್ಲ.
"ಕನ್ನಡ ಚಿತ್ರರಂಗವನ್ನು ಮೊದಲು ಕನ್ನಡವಾಗಿಸಿ"

ನಮಗಿದು ಬೇಕಾ??

ಇದು ಸುಮಾರು ೫ ರಿಂದ ೬ ವರ್ಷಗಳ ಹಿಂದಿನ ಕಥೆ, ನಮ್ಮ ಬೆಂಗಳೂರಿನಲ್ಲಿ ಎಫ್ ಎಂ ರೇಡಿಯೋ ಗಳು ಅಂಬೆಗಾಲು ಇಡುತ್ತ ನಾ ಮುಂದು, ತಾ ಮುಂದು ಎನ್ನುತ್ತಾ ತಮ್ಮ ಉಳಿವಿಗಾಗಿ ಹಾಗು 'ನಂ. ೧' ಸ್ಥಾನಕ್ಕಾಗಿ ಹೋರಾಡುತ್ತಿದ್ದ ಕಾಲ. ಆಗ ಬೆಂಗಳೂರಿನಲ್ಲಿ ಇದ್ದ ಕೆಲವೇ ಕೆಲವು ಎಫ್. ಎಂ ಪ್ರಸರ ಕೇಂದ್ರಗಳು ಬರಿ ವಲಸಿಗರನ್ನು ತೃಪ್ತಿ ಪಡಿಸುವ ಸಲುವಾಗಿಯೋ ಅಥವಾ ಬೆಂಗಳೂರಿನವರ ಅಭಿರುಚಿಯನ್ನು ಸರಿಯಾಗಿ ತಿಳಿಯದೆ ಮಾಡಿದ ಪ್ರಮಾದವೋ, ಏನೋ? ಬರಿ  ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಾ ಅತಿ ದೊಡ್ಡ ಕೇಳುಗರ ಗುಂಪಿನಿಂದ ಎಫ್. ಎಂ. ಎನ್ನುವುದು ದೂರ ಉಳಿದಿತ್ತು. ಆಗ ಬಂದ ಕೆಲವು ಹೊಸ ಚಾನೆಲ್ಗಳಿಗೆ ಯಾರು ಹೇಳಿ ಕೊಟ್ಟರೋ ಏನೋ ಗೊತ್ತಿಲ್ಲ 'ಬರಿ ಕನ್ನಡ ಹಾಡು ಹಾಕಿ ಮತ್ತೆ ಕೇಳುಗರ ಸಂಖ್ಯೆ ನೋಡಿ' ಎಂದು, ಅವು ಅದನ್ನೇ ಮಾಡಿದವು. ಅದರ ಫಲಿತಾಂಶ ಈಗ ಆ ಚಾನೆಲ್ಲುಗಳು 'ಟಾಪ್ ೫' ಸ್ತಾನದಲ್ಲಿವೆ. ಜೊತೆಗೆ ಆದ ಮತ್ತೊಂದು ಬದಲಾವಣೆ ಅಂದರೆ 'ಬರಿ ಹಿಂದಿ ಹಾಗು ಇಂಗ್ಲಿಷ್ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಚಾನೆಲ್ಲಗಳು ಕೂಡ ಕನ್ನಡ ಹಾಡುಗಳನ್ನು ಹಾಕಿ ಟಾಪ್ ೫ ಸ್ಥಾನಕ್ಕೆ ಸೆಣೆಸುತ್ತಿವೆ. 

ಹೀಗೆ ಹೊಸದನ್ನು ಮಾಡಿ ಈಗ ನಂಬರ್ ಒನ್ ಸ್ಥಾನದಲ್ಲಿ ಇರುವ ಚಾನೆಲ್ ಎಂದರೆ ಅದು ಬಿಗ್ ಎಫ್. ಎಂ. ೯೨.೭. ( ಒಂದು ಕಾಲದ, ನನಗೆ ಅತ್ಯಂತ ಇಷ್ಟವಾದ ಎಫ್. ಎಂ. ಚಾನೆಲ್!), ಆಗ ಬರಿ ಕನ್ನಡ ಹಾಡುಗಳನ್ನು ಮಾತ್ರ ಹಾಕಿ ಜನರನ್ನು ತನ್ನತ್ತ ಸೆಳೆದ ಇವರು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗು ಮೈಸೂರು ಪ್ರಸಾರ ಕೇಂದ್ರಗಳಲ್ಲಿ, ಸುಂದರ ಕನ್ನಡ ಹಾಡುಗಳ ಮಧ್ಯೆ ಹಿಂದಿ ಹಾಡುಗಳನ್ನು ಹಾಕಲು ಶುರು ಮಾಡಿದ್ದರೆ, ಈಗ ಮೈಸೂರಿನಲ್ಲಿ ಇರುವ ನನಗೆ ಅನಿಸಿದ್ದು ಏನೆಂದರೆ ಇವರು ಕನ್ನಡಕ್ಕಿಂತ ಹೆಚ್ಹಾಗಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು.

ಸಿಹಿಯಾದ, ಮೃದುವಾದ ಜಾಮೂನನ್ನು ಬಾಯಿ ತುಂಬ ತಿನ್ನುವಾಗ ಒರಟಾದ ಕಲ್ಲು ಸಿಕ್ಕರೆ ಹೇಗೆ ಹೇಳಿ? ನಾನು ಕೆಲ ದಿನಗಳು ಸಹಿಸಿದೆ, ಅತಿ ಹೆಚ್ಹು ಇಷ್ಟ ಪಡುವ ಚಾನೆಲ್ ಆಗಿದ್ದರಿಂದ ಕೆಲ ದಿನ ಇಷ್ಟವಿಲ್ಲದಿದ್ದರೂ ಕನ್ನಡ ಹಾಡುಗಳ ಮಧ್ಯೆ ಪ್ರಸಾರವಾಗುವ ಹಿಂದಿ ಹಾಡುಗಳನ್ನ ಕೇಳುತ್ತಿದ್ದೆ. ಅತಿ ಪ್ರಿಯವಾದ ನನ್ನ ಬಿಗ್ ಎಫ್ ಎಂ ಚಾನೆಲ್ ಅನ್ನು ಬಿಟ್ಟು ಹೋಗಲು ಮನಸಾಗದೆ, ನನ್ನ ಕಷ್ಟದ ಬಗ್ಗೆ ನಿಲಯದ ವ್ಯವಸ್ಥಾಪಕರಿಗೆ ತಿಳಿಸಿ, ಬರಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡಿ ಎಂದು ಪ್ರಾರ್ಥಿಸಲು, ಹೇಗೋ ಮಾಡಿ ಮೈಸೂರಿನ ಎಫ್. ಎಂ. ನಿಲಯದ ದೂರವಾಣಿ ಸಂಖ್ಯೆಯನ್ನು  ಸಂಪಾದಿಸಿ ಕರೆ ಮಾಡಿದೆ.

ನಾನು ಅಂದು ಮಾತನಾಡಿದ್ದು ಬಿಗ್ ಎಫ್ ಎಂ ನ ಮೈಸೂರಿನ ಕಾರ್ಯಕ್ರಮಗಳನ್ನು ನೋಡಿಕೊಳ್ಳುವ ವ್ಯಸ್ಥಾಪಕರ (ಪ್ರೋಗ್ರಾಂ ಕೋಆರ್ಡಿನೆಟರ) ಹತ್ತಿರ, 'ನಿಮ್ಮ ಚಾನೆಲ್ಲಿನಲ್ಲಿ ಆರಾಮಾಗಿ ಕನ್ನಡ ಹಾಡು ಕೇಳುತ್ತಿದ್ದ ನನಗೆ ಮಧ್ಯ ಮಧ್ಯ ಹಿಂದಿ ಹಾಡನ್ನು ಯಾಕೆ ಕೇಳಿಸ್ತೀರ  ಸ್ವಾಮೀ, ಬರಿ ಕನ್ನಡ ಹಾಡುಗಳನ್ನು ಯಾಕೆ ಹಾಕಬಾರದು ನೀವು?'. ಎಂಬ ನನ್ನ ಪ್ರಶ್ನೆಗೆ ಅವರಿಂದ ಬಂದ ಉತ್ತರಗಳು ಹೇಗಿದ್ದವು, "ಹಿಂದಿ ನಮ್ಮ ರಾಷ್ಟ್ರ ಭಾಷೆ, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನರನ್ನು ನನಗೆ ತೋರಿಸಿ, ನಾವು ಎಲ್ಲ ಭಾಷೆಯ ಜನರನ್ನು ಮನರಂಜಿಸ ಬೇಕು, ನಮ್ಮ ಕಾರ್ಯಕ್ರಮಗಳ ರೂಪುರೇಷೆ ಗಳೇ ಹಾಗೆ....". ನಾನಂತು ಸುಸ್ತು ಆಗಿಬಿಟ್ಟೆ, ಅವರ ಉತ್ತರಕ್ಕಲ್ಲ ಅವರ ಅಜ್ಞಾನಕ್ಕಾಗಿ.

ಮೊದಲನೆಯದಾಗಿ, ಭಾರತ ವ್ಯವಿದ್ಯತೆಗಳ ತವರೂರು, ಅದರಲ್ಲೂ ಭಾಷಾ ವ್ಯವಿದ್ಯತೆ ನಮ್ಮ ಹಿರಿಮೆ, ಇಂತಹ ದೇಶದಲ್ಲಿ ಯಾವುದೇ ಒಂದು ಭಾಷೆಯನ್ನು ಹೇಗೆ ರಾಷ್ಟ್ರ ಭಾಷೆ ಎಂದು ಪರಿಗಣಿಸಿ ಉಳಿದ ಭಾಷೆಗಳನ್ನು ಕಡೆಗಣಿಸಲು ಹೇಗೆ ಸಾಧ್ಯ? ಎಲ್ಲಾ ರಾಜ್ಯಗಳ ಭಾಷೆಗೂ ಅದರದೇ ಆದ ನೆಲೆಗಟ್ಟು, ಇತಿಹಾಸ, ಸಂಸ್ಕೃತಿ ಇದೆ, ಇವುಗಳ ನಡುವೆ ನಾವು ಯಾವುದೇ ಒಂದು ಭಾಷೆಗೆ ಮನ್ನಣೆ ನೀಡಿದೆರೆ ನಮ್ಮ ವ್ಯವಿದ್ಯತೆಯನ್ನು ನಾವೇ ಕೊಂದುಹಾಕಿದಂತೆ ಅಲ್ಲವೇ? ಅದೆಲ್ಲಕ್ಕಿಂತ ಹೆಚ್ಹಾಗಿ ನಮ್ಮ ದೇಶಕ್ಕೆ 'ರಾಷ್ಟ್ರ ಭಾಷೆ' ಅನ್ನುವುದೇ ಇಲ್ಲ ಎಂಬ ವಿಚಾರ ಇವರಿಗೆ ತಿಳಿದಿಲ್ಲ ಎಂಬುದೇ ನನಗೆ ಆಶ್ಚರ್ಯದ ವಿಷಯ.. ಇವರಿಗೆ ಈ ವಿಷಯವನ್ನು ತಿಳಿಸಲು ನಾನು ಕೆಳಗಿನ ಕೊಂಡಿಯನ್ನು ಉದಾಹರಣೆಯಾಗಿ ನೀಡ ಬೇಕಾಗಿ ಬಂತು.
 http://articles.timesofindia.indiatimes.com/2010-01-25/india/28148512_1_national-language-official-language-hindi

http://www.mid-day.com/news/2011/jun/240611-RTI-Manoranjan-Roy-Home-Ministry-official-name-passport.htm

ಎರಡನೆಯದು, ಮೈಸೂರಿನಲ್ಲಿ ಹಿಂದಿ ಬಾರದ ೨೦ ಜನ ಬೇಕಂತೆ ಹಾಗು ಅವರು ಎಲ್ಲ ಭಾಷೆಯ ಜನರನ್ನು ರಂಜಿಸ ಬೇಕಂತೆ, ಸ್ವಾಮಿ, ಮೈಸೂರನ್ನು ಒಂದು ಸುತ್ತು ಸರಿಯಾಗಿ ಹೊಡೆದು ನೋಡಿದ್ದರೆ ಅವರು ಈ ಮಾತನ್ನು ನನಗೆ ಹೇಳುತ್ತಿರಲಿಲ್ಲ, ' ಜನರ ಭಾಷೆ ಹಾಗು ಅಭಿರುಚಿಗಳನ್ನು ತಿಳಿಯದೆ ಅದು ಹೇಗೆ ಕಾರ್ಯಕ್ರಮಗಳನ್ನು ರೂಪಿಸುತ್ತರೋ ನಾನರಿಯೆ?'. ಕನ್ನಡಿಗರೇ ತುಂಬಿರುವ ಮೈಸೂರಿನಲ್ಲಿ ಕೇವಲ ಕೆಲವು ವಲಸಿಗರಿಗೊಸ್ಕರ ಅಷ್ಟು ಜನ ಕನ್ನಡಿಗರು ಕನ್ನಡೇತರ ಹಾಡುಗಳನ್ನು ಕೇಳಬೇಕಾ? ಇವರು ಎಲ್ಲ ಭಾಷೆಯ ಜನರನ್ನು ರಂಜಿಸುತ್ತಾರೆ ಅನ್ನವುದಾದರೆ ನಾವು ಚೆನ್ನೈ, ಮುಂಬೈ, ದೆಹಲಿ ಅಂಥಹ ಮುಂತಾದ ನಗರಗಳಲ್ಲಿ ಕನ್ನಡ ಹಾಡುಗಳನ್ನು ಬಿಗ್ ಎಫ್. ಎಂ . ಏಕೆ ಪ್ರಸಾರ ಮಾಡುವುದಿಲ್ಲ? ಅಲ್ಲಿಯೂ ಕನ್ನಡಿಗರಿದ್ದಾರೆ, ಅವರಿಗೂ ಮನರಂಜನೆ ಬೇಕಲ್ಲವೇ? ಇದು ಯಾವ ನ್ಯಾಯ?

ಇನ್ನು ಅವರ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಹಿಂದಿ ಹಾಡುಗಳನ್ನು ಹಾಕುವ ರೂಪುರೇಷೆಗಳನ್ನು ರಚಿಸಿ ಕೊಂಡಿದ್ದಾರೆ, ಕೆಳುಗರಾದ ನಾವು ನಮಗೆ ಇಷ್ಟವಾದ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ಚಾನೆಲ್ಲುಗಳಿಗೆ ವಾಲುತ್ತೇವೆ. ನಾನೀಗ ಅದನ್ನೇ ಮಾಡುತ್ತಿದ್ದೇನೆ,  ಕರ್ನಾಟಕದಲ್ಲಿ ಯಾವ ಭಾಷೆಯಲ್ಲಿ ಮನರಂಜನೆ ನೀಡಬೇಕು ಎಂದು ತಿಳುದು ಕೊಳ್ಳದ ಹಾಗು ನಮ್ಮ ಅಭಿರುಚಿಗಳಿಗೆ ಸ್ಪಂದಿಸದ ಬಿಗ್ ಎಫ್ ಎಂ ಅನ್ನು ಕೇಳುವ ಗೋಜಿಗೆ ನಾನು ಹೋಗುತ್ತಿಲ್ಲ, ನನ್ನ ರೇಡಿಯೋದಲ್ಲಿ ೯೨.೭ ತರಂಗಾಂತರವನ್ನು ನಾನು ತೆಗೆದು ಹಾಕಿದ್ದೇನೆ.
ಜೊತೆಗೆ ನಾನು ಇದನ್ನು ಓದಿದವರಿಗೆ ಕೇಳುವ ಪ್ರಶ್ನೆ '೨೪ ಗಂಟೆ ಕನ್ನಡ ಹಾಡುಗಳನ್ನು ಹಾಕುವ ಎಷ್ಟೋ ಪ್ರಸಾರ ಕೇಂದ್ರ ಗಳು ನಮ್ಮ ನಡುವೆ ಇರುವಾಗ ಇಂಥಹ ಅರೆಬೆರಕೆ ಮನರಂಜನೆ ಬೇಕಾ? ನಮಗಿದು ಬೇಕಾ??'