ಕಳೆದ ವಾರವಷ್ಟೇ ವಿಶ್ವ ಜನಸಂಖ್ಯಾ ಆಚರಿಸಿದ ಇಡೀ ವಿಶ್ವ ಅನೇಕ ಅಂಕಿ ಅಂಶ ಹಾಗು ಮಾರಕಗಳ ಬಗ್ಗೆ ಪೂರ್ಣ ಒಂದು ವಾರ ತಲೆ ಕೆಡಿಸಿಕೊಂಡು ಈಗ ತಣ್ಣಗಾಗಿದೆ. ಭಾರತದಲ್ಲೂ ಏನು ಕಮ್ಮಿ ಇಲ್ಲ, ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ, ದೂರದರ್ಶನ ಹಾಗು ಬಾನುಲಿಗಳಲ್ಲಿ ವಿವಿಧ "ಪಂಡಿತ"ರಿಂದ ಭಾರತದ ಜನಸಂಖ್ಯಾ ಮಾರಕಗಳ ಬಗ್ಗೆ ಉದ್ದುದ್ದ ಮಾತುಗಳೋ ಮಾತುಗಳು. ವಿಶ್ವದ ಹಾಗು ಇಡೀ ಭಾರತದ ಜನಸಂಖ್ಯಾ ಬೆಳವಣಿಗೆಯ ಬಾಧಕ ಹಾಗು ಸಾಧಕಗಳ ಬಗ್ಗೆ ಪೂರ್ಣವಾಗಿ ವಿವರಿಸುವಷ್ಟು ಸಾಧನಗಳು ನನ್ನಲ್ಲಿ ಇಲ್ಲ, ಆದರೆ ಆ ಒಂದು ವಾರದಲ್ಲಿ ಬಾರದ ಕೆಲವು ವಿಚಾರಗಳ ಅವಲೋಕನ ಈ ಲೇಖನದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ.
೨೦೧೧ ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಸುಮಾರು ೧೨೦ ಕೋಟಿ, fertility rate ೨.೬ (೨.೬ ಮಕ್ಕಳು/೧ ಮಹಿಳೆಗೆ), death ರೇಟ್ 6.4 deaths/1,000 population ಹಾಗು ನಮ್ಮಲ್ಲಿ ಶೇಕಡಾ ೬೫ರಷ್ಟು ಜನರು ೩೫ ವರ್ಷ ವಯಸ್ಸಿನ ಒಳಗಿನವರು ಅದರಲ್ಲಿ ಸುಮಾರು ೩೫ ಕೋಟಿ ೦-೧೪ ವಯಸ್ಸಿನ ಮಕ್ಕಳು (ಮೂಲ: http://en.wikipedia.org/wiki/Demographics_of_india) . ಈ ಅಂಕಿ ಅಂಶಗಳನ್ನು ನೋಡಿದರೆ ನನಗೆ ಈಗಿನ ಜನಸಂಖ್ಯಾ ಬೆಳವಣಿಗೆ ಅಂಥಹ ಮಹಾವೇಗದಲ್ಲಿ ಇಲ್ಲ ಎಂದೆನಿಸುತ್ತದೆ.
ಹಾಗಾದರೆ ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇಲ್ಲವಾ? ಎಂದು ನನ್ನ ಕೇಳಿದರೆ 'ನಿಯಂತ್ರಣ ಮಾಡಲೇ ಬೇಕು' ಎಂಬುದೇ ನನ್ನ ಉತ್ತರ, ಆದರೆ ದೇಶ ಅಥವಾ ವಿಶ್ವದ ಯಾವ ಭಾಗದಲ್ಲಿ ನಿಯಂತ್ರಣವಾಗಬೇಕು ಎಂಬುದು ನಾವು ಅರಿತಿರಬೇಕು. ನಮ್ಮ ಭಾರತದ ವಿಷಯಕ್ಕೆ ಬರುವುದಾದರೆ ಉತ್ತರದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳ ಜನಸಂಖ್ಯೆಯ ಜೊತೆಗೆ ಅಲ್ಲಿನ fertility rate ಕೂಡ ಹೆಚ್ಚು ( ಈ ಕೊಂಡಿಯನ್ನು ಗಮನಿಸಿ http://en.wikipedia.org/wiki/Indian_states_ranking_by_fertility_rate ) ಉತ್ತರದ ರಾಜ್ಯಗಳಲ್ಲಿ ಖಂಡಿತವಾಗಿಯೂ ಜನಸಂಖ್ಯೆಯ ನಿಯಂತ್ರಣ ಆಗಬೇಕಿದೆ, ಇಂದಿಗೂ ಅಲ್ಲಿನ ರಾಜ್ಯ ಸರ್ಕಾರಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಅನಿಸುತ್ತಿಲ್ಲ.
ನಮ್ಮ ದಕ್ಷಿಣದ ರಾಜ್ಯಗಳ fertility rate ಗಣನೀಯವಾಗಿ ಕಡಿಮೆ ಆಗುತ್ತಿದೆ (ಸುಮಾರು ೨.೧ ) ಅದರಲ್ಲೂ ನಮ್ಮ ಕರ್ನಾಟಕದ ಜನಸಂಖ್ಯೆ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಇಡೀ ದೇಶಕ್ಕೆ 'ಜನಸಂಖ್ಯಾ ಕಾಯಿದೆ' ಮಾಡಿರುವುದು ಅಸಮಂಜಸವೆ ಸರಿ. 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ', ದೇಶದ ಯಾವ ಭಾಗದಲ್ಲಿ ಯಾವ ರೀತಿಯ ನಿಯಂತ್ರಣ ತರಬೇಕು ಎಂದು ತಿಳಿಯದ ಕೇಂದ್ರ ಸರ್ಕಾರ ಸುಖಾ ಸುಮ್ಮನೆ ನಮ್ಮ ಮೇಲೆ ಹರಿ ಹಾಯುತ್ತದೆ. ಇದನ್ನೆಲ್ಲಾ ನೋಡಿದರೆ ಕನ್ನಡಿಗರು ವಿನಾಶದ ಅಂಚಿನಲ್ಲಿ ಇರುವ ಜನಾಂಗ, ಮುಂದಿನ ಹಲವು ವರ್ಷಗಳಲ್ಲಿ "ಒಂದಾನೊಂದು ಕಾಲದಲ್ಲಿ 'ಕನ್ನಡಿಗರು ಎಂಬ ಜನಾಂಗ ಕನ್ನಡ ಎಂಬ ಭಾಷೆಯನ್ನು ಮಾತನಾಡುತ್ತಿದರು' ಎಂದು ಯಾವುದೊ ವೀಕಿಪೀಡಿಯ ಅಥವಾ ಪುಸ್ತಕದಲ್ಲಿ ನಮ್ಮ ವಲಸಿಗರು ಅಥವಾ ಪರ ರಾಜ್ಯದ ಜನರು ಓದುವ ಸಂದರ್ಭ ಬಂದರೆ ಆಶ್ಚರ್ಯವೇನಲ್ಲ!
ಒಂದು ರಾಜ್ಯದ ಅಥವಾ ರಾಷ್ಟ್ರದ fertility rate ಅನ್ನೋದು ೨.೦ ಕ್ಕಿಂತ ಕಡಿಮೆ ಹೋದರೆ ಅದು ಆ ಜನಾಂಗದ ವಿನಾಶದ ಮುನ್ನುಡಿ, ಅದಾಗಲೇ ದಕ್ಷಿಣದ ರಾಜ್ಯಗಳು ಈ ವಿನಾಶದ ಅಂಚಿಗೆ ಅಡಿಯನ್ನು ಇಡುತ್ತಿವೆ. ಹಾಗಾಗಿ ತಿಳುವಳಿಕೆಯಿಲ್ಲದೆ ಬೇರೆ ರಾಜ್ಯದವರು ಮಾಡುತ್ತಿರುವ ಅಚಾತುರ್ಯಕ್ಕೆ ಕನ್ನಡಿಗರು ತಮ್ಮ ವಂಶವನ್ನು ಬಲಿ ಕೊಡುತ್ತಿರುವುದು ಎಷ್ಟು ಸರಿ? ಕನ್ನಡಿಗರಿಗೆ ಇರುವ ಅಭಿಮಾನದ ಕೊರತೆಯಿಂದ ಕನ್ನಡದ ಮೇಲೆ ನಡೆಯುತ್ತಿರುವ ಪರಭಾಷಾ ಧಾಳಿಯನ್ನು ಇಂದು ತಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇಂದು ಒದಗಿದೆ, ಇನ್ನು ಕನ್ನಡಿಗರ ಕೊರತೆಯಿಂದ ಕನ್ನಡಿಗರ ಮೇಲೆ ನಡೆಯುವ ಧಾಳಿಯನ್ನು ಮುಂದೆ ತಡೆಯಲು ಭಗೀರಥ ಪ್ರಯತ್ನ ಮಾಡಿದರು ಸಾಧ್ಯವಿಲ್ಲ.
ಹಾಗಾದರೆ ನಾವೇನು ಮಾಡಬೇಕು ಎನ್ನುತ್ತೀರಾ? ಏನು ಇಲ್ಲ ಸ್ವಾಮೀ, ಮಾನಸಿಕವಾಗಿ, ಆರ್ಥಿಕವಾಗಿ ಹಾಗು ದ್ಯಹಿಕವಾಗಿ ನಿಮಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಸಾಕುವ ಧ್ಯರ್ಯವಿದ್ದರೆ, ದಯವಿಟ್ಟು ನಿಮ್ಮ ವಂಶೋದ್ದಾರಕರ ಸಂಖ್ಯೆಯನ್ನು ೨ ಅಥವಾ ೩ಕ್ಕೆ ಹೆಚ್ಚಿಸಿಕೊಳ್ಳಿ ಅವರಿಗೂ ನೀವು ಈ ಮಾತನ್ನು ಹೇಳಿ. 'ಕನ್ನಡಿಗರು ನಶಿಸಿದ ಕಥೆ ಬೇರೆ ಯಾವುದೊ ಭಾಷೆಯಲ್ಲಿ ಸಿನಿಮಾ ಆಗಿ ಬರುವುದನ್ನು ತಪ್ಪಿಸುವ ಕೆಲವು ಮಾರ್ಗಗಳಲ್ಲಿ ಇದು ಒಂದು'. ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು "ಮಕ್ಕಲಿರಲ್ಲವ್ವ ಮನೆತುಂಬ" ಎಂದು. ಅಂದು ಅನಕ್ಷರಸ್ಥರಾಗಿ ಅವರಿಗಿದ್ದ ದೂರದೃಷ್ಟಿ ಇಂದು ನಮಗಿಲ್ಲವಾಯಿತಲ್ಲ!.
ಜನಸಂಖ್ಯೆ ಬೆಳವಣಿಗೆ ಮಾರಕವಲ್ಲ ಎಂಬ ವಿಚಾರದ ಮೇಲೆ ಮತ್ತಷ್ಟು ಅರಿಯಲು ಇಲ್ಲಿ ನೋಡಿ: http://www.overpopulationisamyth.com/